For the best experience, open
https://m.navayuganews.com
on your mobile browser.
Advertisement

-ಚಿಕ್ಕರಸು/ವೆಂಕಟರೆಡ್ಡಿ
ನಾವು ಯಾರೂ ಪರಮಾತ್ಮನನ್ನು ನೋಡಲಿಲ್ಲ... ಅದು ಬೇಡ. ನಮ್ಮೊಳಗೇ ಇರುವ ಜೀವಾತ್ಮನನ್ನೂ ಕಾಣಲಿಲ್ಲ...! ಅಂತಹ ಪಾಮರರು ನಾವು-ಅಂದರೆ ನರಮನುಷ್ಯರು.

ಬೆಳಕನ್ನು ಕಾಣಲು ಸಾಧ್ಯವೇ ಕತ್ತಲೆಗೆ..? ಇಲ್ಲ. ಪರಮಾತ್ಮನನ್ನು ಬಿಡಿ, ನಮ್ಮ ಆ ಜೀವಾತ್ಮ ಹೇಗಿದ್ದಾನೆಂಬುದೂ ಈ ಹುಲುಮಾನವನಿಗೆ ತಿಳಿದಿಲ್ಲ.

Advertisement

ಬಹುಶಃ ಜೀವಾತ್ಮ ಎರಡು ರೂಪದಲ್ಲಿರಬಹುದೇನೋ... ಒಂದು ಘನ(ಅನ್ನ) ರೂಪ ಇನ್ನೊಂದು ದ್ರವ(ರಕ್ತ) ರೂಪ!?
ಇದ್ದೀತು... ಇರಲೇಬೇಕು. ಅದಕ್ಕೇ `ಅನ್ನದೇವರ ಮುಂದೆ ಇನ್ನು ದೇವರು ಉಂಟೇ' ಎಂದಿದ್ದಾನೆ ಸರ್ವಜ್ಞ. ಆದ್ದರಿಂದಲೇ ಹೇಳುವುದು; `ಅನ್ನದಾನ ಮಾಡಿ, ರಕ್ತದಾನ ಮಾಡಿ' ಎಂದು. ಅನ್ನ ಪ್ರಾಣ ಉಳಿಸುತ್ತದೆ. ಅನ್ನದಿಂದಲೇ ತಯಾರಾಗುವ ರಕ್ತವೂ ಪ್ರಾಣ ಉಳಿಸುತ್ತದೆ. ಅನ್ನ ಶಕ್ತಿ ಕೊಟ್ಟರೆ - ರಕ್ತ ಜೀವ ಕೊಡುತ್ತದೆ. ಅವಶ್ಯಕತೆ ಇದ್ದಾಗ ಸರಿಯಾದ ಸಮಯಕ್ಕೆ ಇವೆರಡು ಸಿಕ್ಕರೆ ಮುಂದೆ ಹೋಗಲಿದೆ ಜೀವನ. ಇನ್ನು ಬೇರೆ ಯಾವುದೂ ಕೂಡ ಅಮೂಲ್ಯವಾದ ಜೀವವನ್ನು ಉಳಿಸಲಾರದು. ದಯವಿಟ್ಟು ಎಲ್ಲರೂ ಅನ್ನದಾನ, ರಕ್ತದಾನ ಮಾಡಿ ಜೀವ ಉಳಿಸಿ ಎನ್ನುತ್ತಾರೆ ಹಿರಿಯರಾದವರು.

ಹಾರ್ವೆ ಕೊಡುಗೆ
ಹೌದು, ಅಂದಹಾಗೇ ಮನುಷ್ಯರಿಗೆ ಮನುಷ್ಯರ ರಕ್ತ ಕೊಟ್ಟು ಜೀವ ಉಳಿಸುವ ಈ ವಿಧಾನವನ್ನು ಕಂಡು ಹಿಡಿದ ಆ ಮಹಾನುಭಾವ ಯಾರು? ಅದೇ ಸ್ವಾರಸ್ಯಕರ ಕಥೆ. ಇಲ್ಲಿದೆ ನೋಡಿ ಒಂದು ಸಣ್ಣ ಪರಿಚಯ.

1628ರಲ್ಲಿ ವಿಲಿಯಮ್ ಹಾರ್ವೆ ಎಂಬ ವಿಜ್ಞಾನಿ ಜೀವಿಯ ದೇಹದ ರಕ್ತಪರಿಚಲನೆಯನ್ನು ಕಂಡು ಹಿಡಿದದ್ದೇ ಮನುಷ್ಯ ದೇಹಕ್ಕೆ ಹೊರಗಿನಿಂದ ರಕ್ತ ಕೊಡುವ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು.

1665ರಲ್ಲಿ ಮಾನವನಿಗೆ ರಕ್ತ ಕೊಡಲಾಯಿತಂತೆ. ಅದು ಪ್ರಚಾರಕ್ಕೇನೂ ಬರಲಿಲ್ಲ. ಆ ನಂತರ 1795ರಲ್ಲಿ ಫಿಲಿಡೆಲ್ಫಿಯಾ(ಅಮೆರಿಕ)ದ ವೈದ್ಯ ಫಿಲಿಪ್ಸೀಂಗ್ ಫಿಸಿಕ್ ಎನ್ನುವವರು ಮೊತ್ತಮೊದಲು ರೋಗಿಯೊಬ್ಬನಿಗೆ ರಕ್ತ ಕೊಟ್ಟು ಬದುಕಿಸಿದರಂತೆ. ಆದರೆ ಅದೂ ಪ್ರಕಟವಾಗಲಿಲ್ಲ.

ಮುಂದೆ 1818ರ ಸುಮಾರಿನಲ್ಲಿ ಬ್ರಿಟನ್ನಿನ ಜೇಮ್ಸ್ ಬ್ಲಂಡೆಲ್ ಎಂಬ ವಿಜ್ಞಾನಿ ರೋಗಿಯೊಬ್ಬನಿಗೆ ಮಾನವ ರಕ್ತ ಕೊಡುವಲ್ಲಿ ಯಶಸ್ವಿಯಾದ. ಮೃತ್ಯುಶಯ್ಯೆಯಲ್ಲಿದ್ದ ಆ ರೋಗಿ ಬದುಕಿದ. ಅಲ್ಲಿಂದ ಇದು ಜನಜನಿತವಾಯಿತು. ಇದು ಇತಿಹಾಸ.

ವಿಶ್ವದ ಮೊದಲ ಬ್ಲಡ್‍ಬ್ಯಾಂಕ್
ಆ ನಂತರ 1932ರಲ್ಲಿ ಲೆನಿನ್‍ಗ್ರಾಡ್‍ನಲ್ಲಿ ಬ್ಲಡ್‍ಬ್ಯಾಂಕ್(ರಕ್ತನಿಧಿ) ವ್ಯವಸ್ಥೆ ಪ್ರಾರಂಭವಾಯಿತು. ಇದಾದ ಮೇಲೆ ಅಮೆರಿಕದ ಮೊತ್ತಮೊದಲ ಬ್ಲಡ್‍ಬ್ಯಾಂಕ್ ಚಿಕಾಗೊದ ಕುಕ್ ಕೌಂಟಿಯಲ್ಲಿ 1937ರಲ್ಲಿ ಅಸ್ತಿತ್ವಕ್ಕೆ ಬಂತು.    ಅಲ್ಲಿಂದ ಇದು ವಿಶ್ವವ್ಯಾಪಿಯಾಯಿತು.

ಬ್ಲಡ್ ಗ್ರೂಪ್
1901ರಲ್ಲಿ ಕಾರ್ಲ್ ಲ್ಯಾಂಡ್‍ಸ್ಟೀನರ್ ಎಂಬ ವಿಜ್ಞಾನಿ ಪ್ರಪ್ರಥಮ ಬಾರಿಗೆ `ಎ' `ಬಿ' ಮತ್ತು `ಒ' ಎಂಬ ಬ್ಲಡ್ ಗ್ರೂಪ್‍ಗಳನ್ನು ಕಂಡುಹಿಡಿದು ಒಂದು ಮೈಲುಗಲ್ಲನ್ನೇ ಸ್ಥಾಪಿಸಿದ. ಆ ನಂತರ 1902ರಲ್ಲಿ ಡಿಕ್ಯಾಸ್ಟೆಲೊ ಮತ್ತು ಸ್ಟರ್ಲಿ ಎಂಬುವವರು `ಎಬಿ' ಎಂಬ ನಾಲ್ಕನೆ ಗ್ರೂಪನ್ನು ಗುರುತಿಸಿದರು. ಇಂತಿಂತಹ ಪುಣ್ಯಾತ್ಮರು ಏನೆಲ್ಲ ಕೊಡುಗೆ ಕೊಟ್ಟರು ಮನುಷ್ಯನ ಜೀವ ಉಳಿಸಲು... ಆದರೆ ನಾವಿಂದು ಇನ್ನೊಬ್ಬರ ಜೀವ ತೆಗೆಯುವ ಸಂಸ್ಕøತಿ ರೂಢಿಸಿ ಕೊಳ್ಳುತ್ತಿದ್ದೇವಲ್ಲ...ಎಂಥ ವಿಪರ್ಯಾಸ ನೋಡಿ...!

ಸ್ನೇಹಿತರೇ.. ಇಂದು `ರಕ್ತದಾನಿಗಳ'ದ ದಿನ. ಎಲ್ಲರೂ ರಕ್ತದಾನ ಮಾಡಿ. ಮಾಡುತ್ತಲೇ ಇರಿ. ಒಂದು ಬಾಟಲಿ ರಕ್ತ ಮೂರು ಜೀವಗಳನ್ನು ಉಳಿಸುತ್ತದೆ. ಹಾಗೆ ಉಳಿದ ಆ ಮೂರು ಜೀವಗಳು ನಿಮ್ಮನ್ನು ಸದಾ ಹರಸುತ್ತಾ, ಹಾರೈಸುತ್ತಾ ಇರುತ್ತವೆ. ಇನ್ನೇನು ಬೇಕು ಹೇಳಿ. ಇದೇ ಅಲ್ಲವೇ ಬದುಕಿನ ಸಾರ್ಥಕತೆ...ಇನ್ನೊಂದು ವಿಷಯ. `ಕೊಡುವುದರಲ್ಲಿ ಇರುವ ಆನಂದ, ಸಂತೋಷ ಪಡೆಯುವುದರಲ್ಲಿ ಇಲ್ಲ' ಎನ್ನುತ್ತಾರೆ.

ನಿಜಕ್ಕೂ ಕೊಡುವ ತೃಪ್ತಿ ಬೇರೆ ಯಾವುದರಲ್ಲೂ ಇಲ್ಲ. ಅದರಲ್ಲೂ ಒಬ್ಬರಿಗೆ ಜೀವದಾನ ಮಾಡುವುದೆಂದರೆ ಅದೆಷ್ಟು ಶ್ರೇಷ್ಠ... ನೀವೇ ಯೋಚಿಸಿ.

ರಕ್ತದಾನ ಏಕೆ ಮಾಡಬೇಕು?
ರಕ್ತದಾನದ ಬಗ್ಗೆ ಕೆಲವೊಂದು ವಿಷಯಗಳನ್ನು ಹೇಳಬೇಕು. ಮೊದಲನೆಯದಾಗಿ ರಕ್ತ ಕೊಡುವುದರಿಂದ ದಾನಿಗೆ ಯಾವ ತೊಂದರೆಯೂ ಆಗುವುದಿಲ್ಲ. ನಾವು ದಾನ ಮಾಡಿದ ರಕ್ತ ಕೇವಲ 24 ತಾಸುಗಳಲ್ಲಿ ಮರುಸಂಚಯನವಾಗುತ್ತದೆ. 18-65 ವಯಸ್ಸಿನ ಎಲ್ಲರೂ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ಇದರಿಂದ ಸಾಕಷ್ಟು ಆರೋಗ್ಯದ ಲಾಭಗಳು ನಿಮಗೆ ಲಭಿಸಲಿವೆ. ಚರ್ಮದ ಮೇಲೆ ಸಣ್ಣ ಗುಳ್ಳೆ, ಕಲೆ ನಿವಾರಣೆ, ಹೃದಯ ಸಂಬಂಧಿ ತೊಂದರೆಗಳು ಕಡಿಮೆಯಾಗುವುದು, ಹೊಸ ರಕ್ತ ಕಣಗಳ ಉತ್ಪತ್ತಿ ಇದರಿಂದ ದೇಹದಲ್ಲಿ ಉತ್ಸಾಹ ವೃದ್ಧಿಸುವುದು, ಕೊಬ್ಬಿನಂಶ ಕಡಿಮೆಯಾಗುವುದು. ನೆನಪಿನ ಶಕ್ತಿ ಹೆಚ್ಚಾಗುವುದು, ಅಧಿಕ ರಕ್ತದೊತ್ತಡ ಮತ್ತು ಇತರ ರೋಗಗಳನ್ನು ತಡೆಗಟ್ಟಬಹುದು.

ಅಪಘಾತದಲ್ಲಿ ತುಂಬಾ ರಕ್ತಸ್ರಾವವಾದವರಿಗೆ, ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ, ರಕ್ತದ ಕೊರತೆ ಇರುವ ಬಾಣಂತಿಯರಿಗೆ ಡಯಾಲಿಸಿಸ್ ಸಂದರ್ಭದಲ್ಲಿ, ಕ್ಯಾನ್ಸರ್ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ನೀವು ಕೊಡುವ ಒಂದು ಬಾಟಲಿ ರಕ್ತ ನಾಲ್ಕು ಪ್ರಾಣಗಳನ್ನು ಉಳಿಸಬಲ್ಲದು. ರಕ್ತ ಕೊಡುವುದರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ರಕ್ತದಾನ ಸರ್ವಶ್ರೇಷ್ಠವಾದುದು.

Advertisement
Tags :
Advertisement