HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರಮೋದ್ ಮುತಾಲಿಕ್ ನಿಧನ

11:04 AM Dec 03, 2024 IST | Navayuga News
Advertisement

ಬೆಂಗಳೂರು, ಡಿ.3 : ಬಸವನಗುಡಿಯ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರಮೋದ್ ಮುತಾಲಿಕ್ (68) ಅವರು ಸೋಮವಾರ ಮಧ್ಯಾಹ್ನ ನಿಧನರಾದರು.

ಕಳೆದ ಎರಡು ತಿಂಗಳ ಹಿಂದೆ ಅವರ ಅರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದಿನಗಳ ಹಿಂದೆ ತೀವ್ರವಾಗಿ ಆರೋಗ್ಯದಲ್ಲಿ ವ್ಯತ್ಯಾಸ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಇಹಲೋಕ ತ್ಯಜಿಸಿದರು.

Advertisement

ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿ 37 ವರ್ಷ ಸೇವೆ ಸಲ್ಲಿಸಿದ್ದಾರೆ. ಉಪ ಪ್ರಾಂಶುಪಾಲರಾಗಿರೂ ಇವರು ಕಾರ್ಯನಿರ್ವಹಿಸಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೆ ಇವರು ನಿವೃತ್ತಿಹೊಂದಿದ್ದರು. ಮುತಾಲಿಕ್ ಅವರು ವಿಧ್ಯಾರ್ಥಿಗಳ ಅಚ್ಚು ಮೆಚ್ಚಿನ ಮೇಷ್ಟ್ರಾಗಿದ್ದರು. ಎಲ್ಲರೊಂದಿಗೂ ಸ್ನೇಹ ಸ್ವಭಾವದಿಂದಲೇ ಮಾತಿಗಿಳಿದು ಹುರಿದುಂಬಿಸುತ್ತಿದ್ದರು. ವಿದ್ಯಾರ್ಥಿಗಳ ನಡವಳಿಕೆ ಮತ್ತು ಮಾತುಗಳನ್ನ ಗಮನಿಸುತ್ತಿದ್ದ ಅವರು ಸಂಬಂಧಿಸಿದ ಕ್ಷೇತ್ರಗಳಲ್ಲಿ ಬೆಳೆಯುವಂತೆ ಸಲಹೆಗಳನ್ನ ನೀಡುತ್ತಿದ್ದರು.

ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರಾದ ಪ್ರಮೋದ್ ಮುತಾಲಿಕ್ ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ 37 ವರ್ಷ ಆಂಗ್ಲ ಭಾಷೆಯ ಅಧ್ಯಾಪಕರಾಗಿ, ಕೆಲ ವರ್ಷಗಳ ಕಾಲ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದುಕೊಂಡಿದ್ದರು.

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ವಾಸಿಸುತ್ತಿದ್ದ ಇವರಿಗೆ ಒಬ್ಬ ಪುತ್ರ ಮತ್ತು ಪತ್ನಿ ಇದ್ದಾರೆ. ಅಪಾರ ಬಂದುಬಳಗ, ಸಹೋದ್ಯೋಗಿಗಳು, ಸ್ನೇಹಿತರು, ಸಾವಿರಾರು ಮಂದಿ ವಿದ್ಯಾರ್ಥಿಗಳನ್ನು ಅಗಲಿದ್ದಾರೆ.

ಮುತಾಲಿಕ್ ಅವರ ಮೃತದೇಹವನ್ನು ಬನಶಂಕರಿ ಬಳಿಯ ಕುಮಾರಸ್ವಾಮಿ ಬಡಾವಣೆಯ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಮಂಗಳವಾರ ಬೆ.11:30ಕ್ಕೆ ಚಾಮರಾಜಪೇಟೆಯ ಚೀತಾಗಾರದಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.

ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಮುತಾಲಿಕ್ ಅವರು ಅನುವಾದ ಮತ್ತು ವಿಮರ್ಶೆಯಲ್ಲಿ ಸಾಕಷ್ಟು ಕೃಷಿ ಮಾಡಿದ್ದರು. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಶ್ರೇಷ್ಠ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಚಿನುಅ ಅಚಿಬೆಯ Things fall apart, ಆರ್ ಕೆ ನಾರಾಯಣ್ ಅವರ ದಿ ಗೈಡ್, ಸ್ಕಾಟ್ ಫಿಜರಾಲ್ಡ್ ರವರ ಗ್ರೇಟ್ ಗ್ಯಾಟ್ಸ್'ಬಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದಲ್ಲದೆ ಜಗತ್ತಿನ ಅಪರೂಪದ ಕಥೆಗಳನ್ನು ಕನ್ನಡಕ್ಕೆ ಕಣಜ ಎಂಬ ಹೆಸರಿನಲ್ಲಿ ಪರಿಚಯಿಸಿದ್ದಾರೆ. ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಯನ್ನು Beyond Life ಹೆಸರಿನಲ್ಲಿ ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಹೆಚ್ ನರಸಿಂಹಯ್ಯನವರ ಆತ್ಮಕಥೆಯನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ.

ಯಶವಂತ ಚಿತ್ತಾಲರ ಕಥೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಇತ್ತೀಚೆಗೆ ಜಗತ್ತಿನ ಶ್ರೇಷ್ಠ ಕವನಗಳನ್ನು ಅನುವಾದಿಸಿ ಕ್ಷಿತಿಜ ಎಂಬ ಸಂಕಲನದಲ್ಲಿ ಪ್ರಕಟಿಸಿದ್ದಾರೆ. ಇವರ Beyond Life (ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಯ ಆಂಗ್ಲ ಅನುವಾದ)ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಅನುವಾದ ಪುರಸ್ಕಾರ ದೊರೆತಿದೆ. ತ.ರಾ.ಸು ಅವರ ಪ್ರಖ್ಯಾತ ಕಾದಂಬರಿ ಹಂಸಗೀತೆಯ ಆಂಗ್ಲ ಅನುವಾದ ಪ್ರಕಟಣೆ, ಕಣಜದ ವಿಸ್ತೃತ ಆವೃತ್ತಿ ಸಹ ಪ್ರಕಟಿಸಿದ್ದಾರೆ.

Advertisement
Tags :
BasavanagudiBengaluruNational CollegeNcbPramod mutalic passed awayProfessor Pramodh MutalicTeacher
Advertisement
Next Article